ಕನ್ನಡದಲ್ಲಿ ಸೈನ್ಸ್ ಫಿಕ್ಷನ್ ಕಥಾಹಂದರ ಇರುವ ಚಿತ್ರಗಳು ವಿರಳ. ಆ ನಿಟ್ಟಿನಲ್ಲಿ ಈವಾರ ತೆರೆಕಂಡಿರುವ ಬೀಗ ವಿಜ್ಞಾನದ ವಿಸ್ಮಯವನ್ನು ಹೇಳುವ ಚಿತ್ರ. ಆರ್ಮುಗಂ ರವಿಶಂಕರ್ ಒಂದು ಕೀರೋಲ್ ನಿರ್ವಹಿಸಿರುವ ಈ ಚಿತ್ರದ ಕಥೆ ಆರಂಙವಾಗುವುದೇ ನಾಲ್ವರು ಗೆಳೆಯರ ಮೂಲಕ. ಅನಾಥರಾದ ಇವರು ಚಿಕ್ಕವರಿದ್ದಾಗಿಂದಲೂ ಒಟ್ಟಿಗೇ ಬೆಳೆದಿರುತ್ತಾರೆ. ಸಣ್ಣ ಪುಟ್ಟ ಕಳ್ಳತನ ಮಾಡಿಕೊಂಡು ಜೀವನ ಮಾಡುವ ಇವರು ಯಾರಿಗೂ ತೊಂದರೆ ಕೊಡುವವರಲ್ಲ. ಪೋಲೀಸರ ಕ್ರಿಮಿನಲ್ ಪಟ್ಟಿಯಲ್ಲಿ ಇವರ ಹೆಸರಿದ್ದರೂ ತಮ್ಮ ಚಾಣಾಕ್ಷತೆಯಿಂದಲೇ ಎಲ್ಲೂ ಸಿಕ್ಕಿಹಾಕಿಕೊಳ್ಳದ ಹಾಗೆ ಕೆಲಸ ಮಾಡುವವರು. ಚಿತ್ರದ ಇನ್ನೊಂದು ಭಾಗದಲ್ಲಿ ಅಕ್ಕ ತಂಗಿಯರ ಕಥೆಯಿದೆ. ಅಲ್ಲಿ ಅಕ್ಕನಹ ಪ್ರೇಮಕಥೆಯಲ್ಲಿ ಭಾಸ್ಕರ್ ಎಂಬ ಸುರದ್ರೂಪಿ ಸೈಂಟಿಸ್ಟ್ ಮುಂದೆ ನಡೆಯುವ ಇಡೀ ಕಥೆಗೆ ಮೂಲಪುರುಷ. ತನ್ನ ಮನೆಯನ್ನೇ ಲ್ಯಾಬ್ ಮಾಡಿಕೊಂಡಿದ್ದ ಯುವ ವಿಜ್ಞಾನಿ ಭಾಸ್ಕರ್ ತನ್ನ ಪೂರ್ವಜರಿಂದ ಬಂದ ಒಂದು ಅದ್ಭುತ ಶಕ್ತಿಯನ್ನು ತನ್ನದಾಗಿಸಿಕೊಳ್ಳುವ ಪ್ರಯತ್ನದಲ್ಲಿರುತ್ತಾನೆ. ಅದೇನಾದರೂ ಸಕ್ಸಸ್ ಆದರೆ ತನ್ನೆದುರು ಯಾರೇ ಇದ್ದರೂ ತನ್ನ ಮಾತನ್ನಷ್ಟೇ ಕೇಳುವಂತೆ ಕಂಟ್ರೋಲ್ ಮಾಡಬಹುದು. ಅದನ್ನು ಬಳಸಿಕೊಂಡು ಜಗತ್ತನ್ನೇ ಆಳುವ ಶ್ರೀಮಂತನಾಗಬೇಕೆನ್ನುವುದು ಭಾಸ್ಕರ್ ದುರಾಸೆ. ಈ ಕೆಲಸದಲ್ಲಿ ಆತನಿಗೆ ಸಹಾಯ ಮಾಡಲು ಇನ್ನೂ ಕನ್ಯೆಯಾಗಿರುವ ಯುವತಿಯೊಬ್ಬಳು ಬೇಕಿರುತ್ತದೆ. ತನ್ನ ಪ್ರೀತಿ ಮಾಡೋ ಯುವತಿಯರನ್ನು ನೀನು ವರ್ಜಿನ್ನಾ ಅಂತ ಕೇಳಿ ಕಪಾಳಮೋಕ್ಷ ಮಾಡಿಸಿಕೊಳ್ಳುತ್ತಾನೆ. ಆದರೆ ಅಕ್ಕ ಆರಂಭದಲ್ಲಿ ಈತನ ಮಾತು ಕೇಳಿ ಕೋಪಗೊಂಡರೂ ಅದರ ಹಿಂದಿರುವ ಕಾರಣ ತಿಳಿದುಕೊಂಡು ಸಹಕರಿಸಲು ಒಪ್ಪುತ್ತಾಳೆ. ಆಕೆಯ ಮನೆಯಲ್ಲೂ ಇವರ ಪ್ರೀತಿಯನ್ನು ಅಂಗೀಕರಿಸುತ್ತಾರೆ. ಭಾಸ್ಕರ್ ತನ್ನ ಎಕ್ಸ್ಪರಿಮೆಂಟ್ ಆರಂಭಿಸಿ ಅದರಲ್ಲಿ ಯಶಸ್ವಿಯೂ ಆಗುತ್ತಾನೆ. ಆದರೆ ಆ ಪ್ರಯೋಗದ ಪರಿಣಾಮ ತನ್ನ ಪ್ರೀತಿಯನ್ನೇ ಕಳೆದುಕೊಳ್ಳಬೇಕಾಗುತ್ತದೆ. ಅದು ಹೇಗೆ ಈ ನಾಲ್ವರು ಸ್ನೇಹಿತರು ಅಕ್ಕ ತಂಗಿಯರ ಕಥೆಯಲ್ಲಿ ಯಾವ ರೂಪದಲ್ಲಿ ಎಂಟ್ರಿ ಕೊಡುತ್ತಾರೆ ಎನ್ನುವುದೇ ಚಿತ್ರದ ಮುಂದಿನ ಕಥೆ,
ತನ್ನಕ್ಕನ ಸಾವಿಗೆ ಕಾರಣರಾದವರಿಗೆ ಬುದ್ದಿ ಕಲಿಸಬೇಕೆಂದು ನಿರ್ಧರಿಸಿದ ತಂಗಿ ಅದರಲ್ಲಿ ಹೇಗೆ ಯಶಸ್ವಿಯಾಗುತ್ತಾಳೆ, ನಾಲ್ವರು ಹುಡುಗರ ಕಥೆ ಏನಾಯಿತು, ಈ ಎಲ್ಲ ಗೊಂದಲಗಳಿಗೆ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಉತ್ತರವಿದೆ. ಪಾಳುಬಿದ್ದ ಮನೆಯ ಬೀಗ ತೆಗೆಯುವ ನಾಲ್ವರು ಗೆಳೆಯರು ಅಲ್ಲಿ ಯಾವ ಕೃತ್ಯ ನಡೆಸುತ್ತಾರೆ, ಅದರ ಪರಿಣಾಮವೇನಾಯಿತು ಎನ್ನುವುದೂ ಚಿತ್ರದ ಒಂದು ಭಾಗವಾಗಿದೆ.
ಸೈನ್ಸ್ ಫಿಕ್ಷನ್ ಕಥೆಯನ್ನು ಹಾರರ್ ಹಿನ್ನೆಲೆ ಇಟ್ಟುಕೊಂಡು ಮನರಂಜನಾತ್ಮಕವಾಗಿ ನಿರ್ದೇಶಕ ಶ್ರೀನಂದನ್ ಅವರು ಹೇಳಲು ಪ್ರಯತ್ನಿಸಿದ್ದಾರೆ. ಲವ್, ಆಕ್ಷನ್, ಥ್ರಿಲ್ಲರ್ ಸಿನಿಮಾಗಳ ಮಧ್ಯೆ ಒಂದು ವಿಭಿನ್ನ ಕಂಟೆಂಟನ್ನು ಮನರಂಜನಾತ್ಮಕವಾಗಿ ಹೇಳಿಕೊಂಡು ಹೋಗಿದ್ದಾರೆ. ಚಿತ್ರದಲ್ಲಿ ಸಸ್ಪೆಂಡ್ ಆದ ಪೊಲೀಸ್ ಅಧಿಕಾರಿಯಾಗಿ ರವಿಶಂಕರ್ ತನ್ನದೇ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಮೊಗ್ಗಿನ ಮನಸು ಖ್ಯಾತಿಯ ಜೆ.ಡಿ.ಆಕಾಶ್ ಇಲ್ಲಿ ಸೈಂಟಿಸ್ಟ್ ಪಾತ್ರದಲ್ಲಿ ಮಿಂಚಿದ್ದಾರೆ. ಉತ್ತರ ಭಾರತ ಮೂಲದ ಸಹಾರ್ ಅಕ್ಸ ನಾಯಕಿಯಾಗಿ ಉತ್ತಮ ಅಭಿನಯ ನೀಡಿದ್ದು, ಹಿರಿಯನಟ ಸುಚೇಂದ್ರಪ್ರಸಾದ್ ಒಬ್ಬ ಮಂತ್ರವಾದಿಯಾಗಿ ಕಾಣಿಸಿಕೊಂಡಿದ್ದಾರೆ. ಶ್ರೀಗುರು ಅವರ ಸಂಗೀತದ ಹಾಡುಗಳು ಸುಂದರವಾಗಿವೆ. ವೀನಸ್ ನಾಗರಾಜ್ಮೂರ್ತಿ ಅವರ ಕ್ಯಾಮೆರಾ ವರ್ಕ್ ಉತ್ತಮವಾಗಿದೆ.